ಯಶಸ್ವಿಯಾಗಿ ಜರುಗಿದ ರಾಷ್ಟ್ರೀಯ ಲೋಕ ಅದಾಲತ್ : ೧೯೦೪೧ ಪ್ರಕರಣಗಳ ಇತ್ಯರ್ಥ
ಜಿಲ್ಲೆಯಾದ್ಯಂತ ನಡೆದ ರಾಷ್ಟ್ರೀಯ ಲೋಕ್ ಅದಾಲತ್ಗೆ ಕಕ್ಷಿದಾರರ ಅಭೂತಪೂರ್ವ ಸ್ಪಂದನೆ : ಜನತಾ ನ್ಯಾಯಾಲಯದ ಸದುಪಯೋಗಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ಹಾಗೂ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿ ಎಮ್. ಐ ಅರುಣ ಕರೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ಕಕ್ಷಿದಾರರು ನ್ಯಾಯಾಲಯಗಳಿಗೆ ಅಲೆದಾಡುವ ಬದಲು, ಜನತಾ ನ್ಯಾಯಾಲಯದಲ್ಲಿ ರಾಜಿ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ಅನಾವಶ್ಯಕವಾಗಿ ವ್ಯರ್ಥವಾಗುವ ಹಣ ಮತ್ತು ಸಮಯದ ಉಳಿತಾಯವಾಗುವುದರಿಂದ ಸಾರ್ವಜನಿಕರು ಜನತಾ ನ್ಯಾಯಾಲಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ಹಾಗೂ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿ ಎಮ್. ಐ ಅರುಣ ಕರೆ ನೀಡಿದರು.
ಅವರು, ಜಿಲ್ಲೆಯಲ್ಲಿ ನಡೆದ ರಾಷ್ಟ್ರೀಯ ಲೋಕ್ ಆದಾಲತಿನಲ್ಲಿ ಭಾಗವಹಿಸಿ, ಸುಮಾರು ೧೦ ಜೋಡಿಗಳು ರಾಜೀ ಸಂಧಾನದ ಮೂಲಕ ವೈವಾಹಿಕ ಜೀವನ ನಡೆಸಲು ಪರಸ್ಪರ ಒಪ್ಪಿಕೊಂಡಿರುವ ಕುರಿತು ಮತ್ತು ರಾಷ್ಟ್ರೀಯ ಲೋಕ್ ಅದಾಲತನಲ್ಲಿ ರಾಜೀ ಆದ ಪ್ರಕರಣಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮದಲ್ಲ್ಲಿ ಕಕ್ಷಿದಾರರಿಗೆ ತಿಳುವಳಿಕೆ ನೀಡಿದ ಪ್ರಧಾನ ಜಿಲ್ಲಾ ಮತು ಸತ್ರ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಗೌರವಾನ್ವಿತ ಹರೀಶ .ಎ ಅವರು, ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗಿದ್ದ ಆಸ್ತಿ ವಿಭಾಗ ಕೋರಿದ ದಾವೆಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಕೋರಿದ ಪ್ರಕರಣಗಳು, ಜೀವನಾಂಶ ಕೋರಿ ಸಲ್ಲಿಸಿದ ಪ್ರಕರಣಗಳು ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು ಹಾಗೂ ಅಮಲ್ಜಾರಿ ಪ್ರಕರಣಗಳು ಸೇರಿದಂತೆ ಒಟ್ಟು ೧೯,೦೪೧ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಅರವಿಂದ ಸಾಯಬಣ್ಣ ಹಾಗರಗಿ ಅವರು ಮಾತನಾಡಿ, ಜನತಾ ನ್ಯಾಯಾಲಯದಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಂಡು ಪರಸ್ಪರ ಸೌಹಾರ್ದತೆಯಿಂದ ಸಮಾಜದಲ್ಲಿ ಜೀವನ ಸಾಗಿಸುವಂತೆ ಸಲಹೆ ನೀಡಿದರು. ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಒಳಗೊಂಡು ಸುಮಾರು ೧೦ ಜೋಡಿಗಳನ್ನು ಜನತಾ ನ್ಯಾಯಾಲಯದಲ್ಲಿ ರಾಜಿ ಸಂಧಾನದ ಮೂಲಕ ವೈವಾಹಿಕ ಜೀವನ ನಡೆಸಲು ಒಪಿಸಲಾಯಿತು ಎಂದು ಹೇಳಿದರು.
ಜನತಾ ನ್ಯಾಯಾಲಯದ ಯಶಸ್ಸಿಗೆ ಸಹಕರಿಸಿದ ವಕೀಲರು, ಕಕ್ಷಿದಾರರು, ಪೊಲೀಸ್ ಅಧಿಕಾರಿಗಳು-ಸಿಬ್ಬಂದಿ ಉತ್ತಮವಾಗಿ ಸಹಕರಿಸಿದ್ದು ವಿಶೇಷವಾಗಿತ್ತು. ಈ ರಾಷ್ಟ್ರೀಯ ಲೋಕ್ ಅದಾಲತನಲ್ಲಿ ಸಹಭಾಗಿಯಾದ ಸಾರ್ವಜನಿಕರಿಗೆ, ಕಕ್ಷಿದಾರರಿಗೆ, ಪಕ್ಷಗಾರರ ಪರ ವಕೀಲರುಗಳಿಗೆ ಸಹಕರಿಸಿದ ಎಲ್ಲರ ಸಹಕಾರಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಗೌರವಾನ್ವಿತ ಹರೀಶ ಎ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.