ತೊಂದರೆ ತಪ್ಪಿಸಲು ಗುಣಮಟ್ಟದ ಸಿಸಿ ರಸ್ತೆ ಅಭಿವೃದ್ಧಿ : ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಯತ್ನಾಳ ಭೂಮಿಪೂಜೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಪದೇ ಪದೇ ರಸ್ತೆಗಳು ಹಾಳಾಗಿ ಸಾರ್ವಜನಿಕರ ಸಂಚಾರಕ್ಕೆ ಆಗುತ್ತಿದ್ದ ತೀವ್ರ ತೊಂದರೆ ತಪ್ಪಿಸಲು, ಎಲ್ಲ ಬಡಾವಣೆ/ಕಾಲೊನಿಗಳ ಆಂತರಿಕ ರಸ್ತೆಗಳು ಸೇರಿದಂತೆ ಮುಖ್ಯ ರಸ್ತೆಗಳನ್ನೂ ಗುಣಮಟ್ಟದ ಸಿಸಿ ರಸ್ತೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ವಾರ್ಡ್ ನಂ.೨೨ ರಲ್ಲಿ ಬರುವ ವಿವೇಕ ನಗರ (ಪಶ್ಚಿಮ) ಶ್ರೀ ಜಾಗೃತ ಹನುಮಾನ್ ದೇವಸ್ಥಾನದ ಹತ್ತಿರ ಸೋಮವಾರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ರೂ.೧೦ ಲಕ್ಷ ಮೊತ್ತದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈಗಾಗಲೇ ನಗರದಲ್ಲಿ ಬಹುತೇಕ ರಸ್ತೆಗಳು ಅಭಿವೃದ್ಧಿ ಆಗಿವೆ. ಉಳಿದಿರುವ ಅಲ್ಪಸ್ವಲ್ವ ರಸ್ತೆಗಳನ್ನು ಸಹ ಅಭಿವೃದ್ಧಿ ಪಡಿಸಲಾಗುವುದು. ಅಲ್ಲದೆ, ನಗರದಲ್ಲಿ ಬಹುತೇಕ ದೊಡ್ಡ ದೊಡ್ಡ ಕಾಮಗಾರಿಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದ್ದು, ಯಾವುದೇ ಅಭಿವೃದ್ಧಿ ಕಾಮಗಾರಿಗಳು ಬಾಕಿ ಉಳಿದುಕೊಂಡಿದ್ದರೆ ಗಮನಕ್ಕೆ ತನ್ನಿ, ತಕ್ಷಣ ಸ್ಪಂಧಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೂ ಮೊದಲು ಜಾಗೃತ ಹನುಮಾನ್ ದೇವರ ದರ್ಶನಾಶಿರ್ವಾದ ಪಡೆದುಕೊಳ್ಳಲಾಯಿತು. ಇದೇ ವೇಳೆ ಆತ್ಮೀಯವಾಗಿ ಸನ್ಮಾನಿಸಿದರು.
ನಂತರ ನೆರೆದ ಸಾರ್ವಜನಿಕರ ಅಹವಾಲು ಆಲಿಸಿದರು. ಮಹಾನಗರ ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಮಲ್ಲಿಕಾರ್ಜುನ ಗಡಗಿ ಸೇರಿದಂತೆ ಮುಖಂಡರು, ಹಿತೈಷಿಗಳು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.