ಕೆ.ಕೆ.ಆರ್.ಡಿ.ಬಿ. ಮಂಡಳಿ ಕಾರ್ಯದರ್ಶಿಯಾಗಿ ನಲಿನ್ ಅತುಲ್ ಅಧಿಕಾರ ಸ್ವೀಕಾರ

ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ನೂತನ ಕಾರ್ಯದರ್ಶಿಯಾಗಿ ೨೦೧೪ರ ಕರ್ನಾಟಕ ಕೇಡರ್ ಐ.ಎ.ಎಸ್ ಅಧಿಕಾರಿ ನಲಿನ್ ಅತುಲ್ ಬುಧವಾರ ಅಧಿಕಾರ ಸ್ವೀಕರಿಸಿದರು.
ಮಂಡಳಿ ಕಾರ್ಯದರ್ಶಿಯಾಗಿದ್ದ ಐ.ಎ.ಎಸ್. ಅಧಿಕಾರಿ ಎಂ.ಸುAದರೇಶ ಬಾಬು ಅವರನ್ನು ಕೇಂದ್ರ ಸರ್ಕಾರದ ಸೇವೆಗೆ ನಿಯೋಜನೆ ಮಾಡಿದ್ದರಿಂದ ತೆರವಾದ ಸ್ಥಾನಕ್ಕೆ ಕೊಪ್ಪಳ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ನಲಿನ್ ಅತುಲ್ ಅವರನ್ನು ಸರ್ಕಾರ ಇತ್ತೀಚೆಗೆ ವರ್ಗಾಯಿಸಿತ್ತು.
ಮೂಲತ ಬಿಹಾರ ರಾಜ್ಯದವರಾಗಿರುವ ನಲಿನ್ ಅತುಲ್ ಅವರು ಬಿ.ಟೆಕ್ (ಎಲೆಕ್ಟ್ರಿಕಲ್ ಇಂಜಿನೀಯರಿAಗ್) ಪದವೀಧರರಾಗಿದ್ದಾರೆ. ರಾಯಚೂರು ಜಿಲ್ಲಾ ಪಂಚಾಯತ್ ಸಿ.ಇ.ಓ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮುಖ್ಯಸ್ಥರಾಗಿ, ಕೆ.ಪಿ.ಎಸ್.ಸಿ ಪರೀಕ್ಷಾ ನಿಯಂತ್ರಕರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಇವರು, ಈ ಹಿಂದೆ ಕಲಬುರಗಿಯಲ್ಲಿ ೨೦೧೯ರ ಅಕ್ಟೋಬರ್ ೨೨ ರಿಂದ ೨೦೨೨ರ ಜನವರಿ ೨೭ರ ವರೆಗೆ ಶಾಲಾ ಶಿಕ್ಷಣ ಇಲಾಖೆಯ ಅಪರ ಅಯುಕ್ತರಾಗಿ ಕಾರ್ಯನಿರ್ವಹಿಸಿದ್ದು, ಇದೀಗ ಮತ್ತೆ ಬಿಸಿಲೂರಿನಲ್ಲಿ ಸೇವೆ ಮಾಡಲು ಬಂದಿದ್ದಾರೆ.
ಇದಲ್ಲದೆ ನಲಿನ್ ಅತುಲ್ ಅವರು ಕರ್ನಾಟಕದಲ್ಲಿ ಶಾಲಾ ಶಿಕ್ಷಣದ ವಿವಿಧ ಅಂಶಗಳನ್ನು ಅಧ್ಯಯನ ಮಾಡಲು ಮತ್ತು ವರದಿ ಮಾಡಲು ರಾಜ್ಯ ಶಿಕ್ಷಣ ನೀತಿ ಆಯೋಗದ ಅಡಿಯಲ್ಲಿ ರಚಿಸಲಾದ ವಿಷಯಾಧಾರಿತ ಕಾರ್ಯಪಡೆ ಸದಸ್ಯರಾಗಿ ಮತ್ತು ೩ ರಿಂದ ೬ ವರ್ಷ ವಯಸ್ಸಿನ ಮಕ್ಕಳಿಗೆ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ (ಇಅಅಇ) ಪಠ್ಯಕ್ರಮ ಮತ್ತು ಮೌಲ್ಯಮಾಪನ ಮತ್ತು ಅಂಗನವಾಡಿ ಸುಧಾರಣೆ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ರಚಿಸಲ್ಪಟ್ಟ ಉಪ ಸಮಿತಿಯ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರದೇಶದ ಅಭಿವೃದ್ಧಿಗೆ ಶ್ರಮಿಸುವೆ: ಮಂಡಳಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರ ಸಲಹೆ ಹಾಗೂ ಪ್ರದೇಶದ ಏಳು ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿ.ಇ.ಓ ಅವರುಗಳ ಅಭಿಪ್ರಾಯ ಪಡೆದು ರಾಜ್ಯ ಸರ್ಕಾರ ಮಂಡಳಿಗೆ ಒದಗಿಸಿರುವ ಅನುದಾನವನ್ನು ಪ್ರದೇಶದ ಒಳಿತಿಗೆ ಸಮರ್ಪಕವಾಗಿ ಅನುಷ್ಠಾನ ಮಾಡುವುದರ ಜೊತೆಗೆ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ನಲಿನ್ ಅತುಲ್ ತಿಳಿಸಿದರು.
ಈ ಸಂದರ್ಭದಲ್ಲಿ ಮಂಡಳಿ ಉಪ ಕಾರ್ಯದರ್ಶಿ ಮಂಜುನಾಥ ಸ್ವಾಮಿ ಜಿ.ಎನ್., ಅಪರ ನಿರ್ದೇಶಕಿ ಪ್ರವೀಣಪ್ರಿಯಾ ಡೇವಿಡ್, ಅಧೀಕ್ಷಕ ಅಭಿಯಂತತರು ವಿಜಯಕುಮಾರ ಪಾಟೀಲ, ಹಣಕಾಸು ನಿಯಂತ್ರಕಿ ಅಕ್ಕನಾಗಮ್ಮ, ಅಧೀನ ಕಾರ್ಯದರ್ಶಿ ಪ್ರಕಾಶ ಕುದರಿ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.