ರೌಡಿಶೀಟರ್ ಕಾಳೆ ಕಗ್ಗೊಲೆ ಪ್ರಕರಣ : ಆರೋಪಿಗಳ ಕಾಲಿಗೆ ಗುಂಡೇಟು : ಎಸ್ಪಿ ನಿಂಬರಗಿ
ರೌಡಿಶೀಟರ್ ಕಾಳೆ ಕಗ್ಗೊಲೆ ಪ್ರಕರಣ | ಖಾಕಿ ಪಡೆಯಿಂದ ಭರ್ಜರಿ ಕಾರ್ಯಾಚರಣೆ | ಖಾಕಿ ಮೇಲೆ ದಾಳಿಗೆ ಯತ್ನ | ಇಬ್ಬರ ಬಂಧನ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ಭೀಮಾತೀರದಲ್ಲಿ ಮತ್ತೆ ನೆತ್ತರು ಹರಿದಿದೆ. ಬಾಗಪ್ಪ ಹರಿಜನನ ಹಳೆಯ ಶಿಷ್ಯ ಸುಶೀಲ್ ಕುಮಾರ ಕಾಳೆಯನ್ನು ಮಾರಾಕಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಸೋಮವಾರ ಎಸ್ಎಸ್ ರಸ್ತೆ ಬಳಿ ಇರುವ ಅಮರವರ್ಷಿಣಿ ಸಹಕಾರಿ ಬ್ಯಾಂಕ್ಗೆ ಸುಶೀಲ್ ಕಾಳೆ ಬಂದಿದ್ದ. ಈ ವೇಳೆ ಆರೋಪಿಗಳು ಗುಂಡು ಹಾರಿಸಿ ಬಳಿಕ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದರು.
ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ನಿನ್ನೆಯೇ ಪ್ರಕರಣ ದಾಖಲಾಗಿತ್ತು. ತನಿಖೆಗೆ ಇಳಿದಿದ್ದ ಪೊಲೀಸರು ತಡರಾತ್ರಿಯಿಂದ ಕಾರ್ಯಾಚರಣೆಗೆ ಇಳಿದಿದ್ದರು.
ಮಂಗಳವಾರ ಬೆಳಗ್ಗೆ ಇಬ್ಬರು ಆರೋಪಿಗಳ ಕಾಲಿಗೆ ಪೊಲೀಸರು ಗುಂಡೇಟು ಕೊಟ್ಟು ಬಂಧಿಸಿದ್ದಾರೆ. ಆರೋಪಿಗಳು ಪೊಲೀಸರ ಮೇಲೆಯೇ ದಾಳಿಗೆ ಯತ್ನಿಸಿದ ಹಿನ್ನೆಲೆಯಲ್ಲಿ ಸಿಪಿಐ ಪ್ರದೀಪ್ ತಳಕೇರಿ ಮೂರು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ ಹೇಳಿದ್ದಾರೆ.
ಘಟನಾ ಸ್ಥಳದಲ್ಲಿ ಆರೋಪಿಗಳ ಕಂಟ್ರಿ ಪಿಸ್ತೂಲ್ ಬಿದ್ದಿದೆ. ಅಲ್ಲದೇ ಆರೋಪಿಗಳು ಬಳಸುತ್ತಿದ್ದ ನಂಬರ್ ಪ್ಲೇಟ್ ಇಲ್ಲದ ಸ್ಪ್ಲೆಂಡರ್ ಬೈಕ್ ಕೂಡ ಅಲ್ಲಿಯೇ ಬಿದ್ದಿದೆ. ಬೈಕ್ ಮೇಲೆ ಪರಾರಿಯಾಗ್ತಿದ್ದ ಆರೋಪಿಗಳನ್ನ ಹಿಡಿಯಲು ಯತ್ನಿಸಿದ್ದಾಗ ಪೊಲೀಸರ ಮೇಲೆಯೇ ಫೈರಿಂಗ್ಗೆ ಯತ್ನಿಸಿದ್ದರು. ಆತ್ಮರಕ್ಷಣೆಗಾಗಿ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಆರೋಪಿ ಆಕಾಶ ಕಲ್ಲವ್ವಗೋಳ, ಸುದೀಪ್ ಅಲಿಯಾಸ್ ಸುಭಾಷ್ ಕಾಲಿಗೆ ಗುಂಡೇಟು ನೀಡಿದ್ದಾರೆ. ಬಂಧಿತ ಆರೋಪಿ ಆಕಾಶ ಮೇಲೆ ಈಗಾಗಲೇ ೭ ಪ್ರಕರಣಗಳಿದ್ದವು. ಫೈರಿಂಗ್ ನಡೆದ ಘಟನಾ ಸ್ಥಳ ಇಟ್ಟಂಗಿಹಾಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ ಭೇಟಿ ನೀಡಿದ್ದಾರೆ.