ಮನುಷ್ಯನ ಕಾನೂನಿನ ರಕ್ಷಣೆ ತಾಯಿಯ ಗರ್ಭದಲ್ಲಿದ್ದಾಗಿನಿಂದಲೇ ಪ್ರಾರಂಭವಾಗುತ್ತದೆ: ನ್ಯಾ.ರಾಜಶೇಖರ ತಿಳಗಂಜಿ

Jan 28, 2025 - 08:45
 0
ಮನುಷ್ಯನ ಕಾನೂನಿನ ರಕ್ಷಣೆ ತಾಯಿಯ ಗರ್ಭದಲ್ಲಿದ್ದಾಗಿನಿಂದಲೇ ಪ್ರಾರಂಭವಾಗುತ್ತದೆ: ನ್ಯಾ.ರಾಜಶೇಖರ ತಿಳಗಂಜಿ

ಮುಗಳಖೋಡ: ಪ್ರತಿಯೊಬ್ಬ ವ್ಯಕ್ತಿಯೂ ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಅದನ್ನು ಪಾಲಿಸಬೇಕು. ಮಗು ತಾಯಿಯ ಗರ್ಭದಲ್ಲಿದ್ದಾಗಿನಿಂದಲೇ ಕಾನೂನಿನ ರಕ್ಷಣೆ ಪ್ರಾರಂಭವಾಗುತ್ತದೆ ಎಂದು ನ್ಯಾಯಾಧೀಶ ರಾಜಶೇಖರ ತಿಳಗಂಜಿ ಹೇಳಿದರು.

ಅವರು ಪಟ್ಟಣದ ಶ್ರೀ ಯಲ್ಲಾಲಿಂಗ ಮಹಾರಾಜರ 39 ನೇ ಪುಣ್ಯಾರಾಧನೆಯ ಪ್ರವಚನ ವೇದಿಕೆಯಲ್ಲಿ ರವಿವಾರ 26 ರಂದು 76 ನೇ ಗಣರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡ ಕಾನೂನು ಅರಿವು ನೇರವು ಕಾರ್ಯಕ್ರಮದಲ್ಲಿ ಮಾತನಾಡಿ, ಸಾಮಾಜಿಕ ನ್ಯಾಯದಲ್ಲಿ ಸಮಾನತೆ ಇದೆ, ಎಲ್ಲರಿಗೂ ಒಂದೇ ಕಾನೂನು ಇರುವ ನಮ್ಮ ದೇಶದಲ್ಲಿ ಬಾಲ ಕಾರ್ಮಿಕ ಪದ್ದತಿ, ಬಾಲ್ಯ ವಿವಾಹ, ಭ್ರಷ್ಟಾಚಾರ, ಅತ್ಯಾಚಾರ, ಕೊಲೆ ಸುಲುಗೆ ಇಂತಹ ಸಾಕಷ್ಟು ಕಾನೂನು ಬಾಹಿರ ಪದ್ದತಿಗಳಿಗೆ ಕಡಿವಾಣ ಹಾಕಲು ವಿಶೇಷ ಆಯಾಮಗಳನ್ನು ಒಳಗೊಂಡಿದೆ.

ಸಾಮಾನ್ಯರು ಅರಿವು ಮಾಡಿಕೊಳ್ಳಲು ಪ್ರತಿಯೊಂದು ತಾಲ್ಲೂಕಿನಲ್ಲಿ ಕಾನೂನು ಸೇವಾ ಸಮಿತಿಗಳು ಇವೆ ಅದರ ಸದುಪಯೋಗ, ತಿಳುವಳಿಕೆ ಪಡೆದು ಅವಶ್ಯಕತೆ ಇದ್ದರೆ ಬಳಸಿಕೊಳ್ಳಿ. ಬಾಲಕರಿಗೆ ವಾಹನಗಳನ್ನು ನಿರ್ಬಂಧಿಸಿ, ಆಸ್ತಿಗಳನ್ನು ಕೊಳ್ಳುವುದು, ಮಾರುವುದು ಮತ್ತು ವಿಭಾಗ ಮಾಡುವಲ್ಲಿ ಅತ್ಯಂತ ಜಾಗರೂಕತೆಯಿಂದ ದಾಖಲೆಗಳನ್ನು ಖಚಿತಪಡಿಸಿಕೊಂಡು ವ್ಯವಹಾರ ಕೈಗೊಳ್ಳಿ ಎಂದು ಕಾನೂನಿನ ಬಗ್ಗೆ ಅರಿವು ಮೂಡಿಸಿದರು.

ಶೇಗುಣಸಿಯ ವಿರಕ್ತ ಮಠದ ಡಾ. ಮಹಾಂತ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ದೇಶಿಸಿ ಆಶೀರ್ವಚನ ನೀಡಿದರು.

ಶ್ರೀ ಮಠದ ವೇದಿಕೆಯಲ್ಲಿ ಸಂವಿಧಾನದ ಪೀಠಿಕೆಗೆ ಪರಮ ಪೂಜ್ಯ ಡಾ. ಮುರುಘರಾಜೇಂದ್ರ ಶ್ರೀಗಳು ಪೂಜೆ ಸಲ್ಲಿಸಿ, ಪುಷ್ಪಗಳಿಂದ ವಿಶೇಷ ತುಲಾಭಾರ ಮಾಡಿ, ಸಂವಿಧಾನಕ್ಕೆ ಗೌರವ ಸಮರ್ಪಿಸಿದರು. ಬಳಿಕ ಮಾತನಾಡಿದ ಅವರು ಪ್ರತಿಯೊಬ್ಬ ಪ್ರಜೆಯು ಕಾನೂನಿನ ಜ್ಞಾನ ಪಡೆದು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕಾನೂನಿನ ಚೌಕಟ್ಟಿನಲ್ಲಿ ನಡೆಯಬೇಕು ಸದುಪಯೋಗ ಪಡೆದು ಸತ್ಯದ ಮಾರ್ಗದಲ್ಲಿ ನಡೆದಾಗ ಜೀವನ ಪಾವನವಾಗುದು ಎಂದು ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ರಾಯಬಾಗ, ಮೂಡಲಗಿ, ಬಾಗಲಕೋಟ ಸೇರಿದಂತೆ ಹಲವಾರು ತಾಲೂಕಿನ ನ್ಯಾಯಾಧೀಶರು ಉಪಸ್ಥಿತರಿದ್ದರು.

ಪಾದಯಾತ್ರೆ: ಕೋಳಿಗುಡ್ಡದಿಂದ ಮುಗಳಖೋಡ ಶ್ರೀಮಠದವರೆಗೆ ಸಾವಿರಾರು ಭಕ್ತರು ಶ್ರೀ ಯಲ್ಲಾಲಿಂಗೇಶ್ವರ ಮಹಾರಾಜರ ಪಲ್ಲಕ್ಕಿ ಹೊತ್ತು ಪಾದಯಾತ್ರೆ ಮೂಲಕ ಬಂದರು. ಮಾರ್ಗ ಮದ್ಯದ ನೂರಾರು ಭಕ್ತರು ಪಾದಯಾತ್ರಿಗಳಿಗೆ ಹಾಲು, ಮಜ್ಜಿಗೆ, ತಂಪು ಪಾನೀಯಗಳು, ಉಪಹಾರ ಮತ್ತು ಊಟದ ವ್ಯವಸ್ಥೆ ಮಾಡಿದ್ದರು. ಸಾಯಂಕಾಲ ಪಟ್ಟಣದ ದ್ವಾರ ಬಾಗಿಲಿನಿಂದ ಶ್ರೀಮಠದವರೆಗೆ ಸಕಲ ವಾದ್ಯ ಮೇಳಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು.

ನ್ಯಾಯವಾದಿ ಸೋಮು ಹೊರಟ್ಟಿ ಕಾರ್ಯಕ್ರಮ ನಿರೂಪಿಸಿದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.