ಜುಲೈ 4ಕ್ಕೆ ರಾಜ್ಯದಾದ್ಯಂತ ಹೆಬ್ಬುಲಿ ಕಟ್ ಚಿತ್ರ ಬಿಡುಗಡೆ
'ಹೆಬ್ಬುಲಿ ಕಟ್’ ಟ್ರೈಲರ್ಗೆ ನಟ ಕಿಚ್ಚ ಸುದೀಪ್ ಮೆಚ್ಚುಗೆ
- ಟ್ರೈಲರ್ನ ಸೃಜನಶೀಲತೆ ಮತ್ತು ಕಥನ ಶೈಲಿಯನ್ನು ಕಿಚ್ಚ ಸುದೀಪ್ ತಮ್ಮ ಎಕ್ಸ್ ಖಾತೆಯಲ್ಲಿ ಕೊಂಡಾಡಿದ್ದಾರೆ.
- ಈ ಚಿತ್ರವು 2017ರಲ್ಲಿ ಬಿಡುಗಡೆಯಾದ ಸುದೀಪ್ ಅಭಿನಯದ ‘ಹೆಬ್ಬುಲಿ’ ಚಿತ್ರದಿಂದ ಸ್ಫೂರ್ತಿಗೊಂಡಿದ್ದು, ಅದರಲ್ಲಿ ಜನಪ್ರಿಯವಾದ ‘ಹೆಬ್ಬುಲಿ ಕಟ್’ ಕೇಶವಿನ್ಯಾಸದಿಂದ ಈ ಹೆಸರು ಪಡೆದಿದೆ
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ‘ಹೆಬ್ಬುಲಿ ಕಟ್’ ಚಿತ್ರದ ಟ್ರೈಲರ್ ಜೂನ್ 16, 2025ರಂದು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.
ರಾಯಚೂರು ಮೂಲದ ಯುವ ನಿರ್ದೇಶಕ ಭೀಮರಾವ್ ಪೈದೊಡ್ಡಿ ನಿರ್ದೇಶನದ ಈ ಚಿತ್ರವು ಸೃಜನಶೀಲ ಕಥಾನಕ ಮತ್ತು ಭಾವನಾತ್ಮಕ ಕಥನ ಶೈಲಿಯಿಂದ ಚಿತ್ರರಸಿಕರ ಗಮನ ಸೆಳೆದಿದೆ. ಟ್ರೈಲರ್ಗೆ ಕಿಚ್ಚ ಸುದೀಪ್ ತಮ್ಮ ಎಕ್ಸ್ ಖಾತೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದು, “ಹೆಬ್ಬುಲಿ ಕಟ್ ಟ್ರೈಲರ್ ತುಂಬಾ ಆಕರ್ಷಕವಾಗಿದೆ. ಚಿತ್ರತಂಡಕ್ಕೆ ಶುಭಾಶಯಗಳು,” ಎಂದು ಬರೆದಿದ್ದಾರೆ.
2017ರಲ್ಲಿ ಬಿಡುಗಡೆಯಾದ ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಚಿತ್ರದಿಂದ ಸ್ಫೂರ್ತಿಗೊಂಡಿರುವ ಈ ಚಿತ್ರ, ಅದರ ಜನಪ್ರಿಯ ‘ಹೆಬ್ಬುಲಿ ಕಟ್’ ಕೇಶವಿನ್ಯಾಸದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಕಿಚ್ಚ ಸುದೀಪ್ರ ಸ್ಟಾರ್ಡಮ್ನಿಂದ ಪ್ರೇರಿತವಾದ ಒಬ್ಬ ವ್ಯಕ್ತಿಯ ಜೀವನದ ಸವಾಲುಗಳನ್ನು ಈ ಚಿತ್ರ ಭಾವನಾತ್ಮಕವಾಗಿ ಚಿತ್ರಿಸುತ್ತದೆ. ಚಿತ್ರಕಥೆ ಮತ್ತು ಸಂಭಾಷಣೆಯನ್ನು ‘ಡೇರ್ಡೆವಿಲ್ ಮುಸ್ತಾಫಾ’ ಖ್ಯಾತಿಯ ಅನಂತ ಶಾಂದ್ರೇಯ ಬರೆದಿದ್ದಾರೆ. ದೀಪಕ್ ಯರಗೇರಾ ಅವರ ಛಾಯಾಗ್ರಹಣ ಮತ್ತು ನವನೀತ್ ಶ್ಯಾಮ್ರ ಸಂಗೀತ ಚಿತ್ರಕ್ಕೆ ವಿಶಿಷ್ಟ ಮೆರಗು ತಂದಿದೆ.
ನಟ ಸತೀಶ್ ನೀನಾಸಂ ಈ ಚಿತ್ರದ ಸೃಜನಶೀಲತೆಗೆ ಮನಸೋತು, ತಮ್ಮ ‘ಸತೀಶ್ ಪಿಕ್ಚರ್ ಹೌಸ್’ ಬ್ಯಾನರ್ನಡಿ ಚಿತ್ರವನ್ನು ಬಿಡುಗಡೆ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. “ಇಂತಹ ಸಿನಿಮಾಗಳಿಗೆ ಬೆಂಬಲ ನೀಡದಿದ್ದರೆ ಮತ್ತೆ ಯಾವ ಸಿನಿಮಾಗಳಿಗೆ ನೀಡಲಿ?” ಎಂದು ಅವರು ಶ್ಲಾಘಿಸಿದ್ದಾರೆ.
ಫೇಸ್ಬುಕ್ನಲ್ಲಿ ಹುಲಿಕುಂಟೆ ಮೂರ್ತಿ ಎಂಬುವರು ಚಿತ್ರದ ಕುರಿತು, “ಪಕ್ಕದ ತಮಿಳು, ತೆಲುಗು, ಮಲಯಾಳ ಭಾಷೆಗಳ ಸಿನಿಮಾದವರು ಅಡ್ರೆಸ್ ಮಾಡ್ತಿರೋ ವಿಷಯಗಳನ್ನು ಕನ್ನಡದವರು ಅಡ್ರೆಸ್ ಮಾಡಲು ಇನ್ನೂ ಹೆಣಗುತ್ತಿರುವ ಕಾಲದಲ್ಲೇ 'ಹೆಬ್ಬುಲಿ ಕಟ್' ಬಂದಿದೆ.ಭಾರತದ ಜಾತಿ ಕ್ರೌರ್ಯ, ಕೋಮುವಾದಗಳು ಎಲ್ಲಿಯವರೆಗೂ ಹಬ್ಬಿವೆ ಎಂಬುದನ್ನು ಈ ಸಿನಿಮಾ ತಣ್ಣಗೆ ಕಾಣಿಸುತ್ತದೆ.. ಮೇಕಿಂಗ್, ಕಂಟೆಂಟ್, ಸಂಗೀತ, ಸಿನಿಮಾಟೋಗ್ರಫಿ, ನಟನೆ... ಎಲ್ಲದರಲ್ಲೂ ಯಾವುದಕ್ಕೂ ಕಮ್ಮಿ ಇಲ್ಲದಂತೆ ಕಟ್ಟಲಾಗಿದೆ. ಗೆಳೆಯ ಭೀಮರಾವ್ ಮತ್ತವರ ತಂಡಕ್ಕೆ ನಮ್ಮ ನೀನಾಸಂ ಸತೀಶ್ ಹೆಗಲಾಗಿದ್ದಾರೆ. ಟ್ರೇಲರ್ ಬಂದಿದೆ. ನೋಡಿ..... ಸಿನಿಮಾ ಜುಲೈ 4 ಕ್ಕೆ ರಿಲೀಸ್ ಆಗುತ್ತೆ..... ಥಿಯೇಟರ್ ಗೆ ಹೋಗೋಣ.....ಎಂದು ಪ್ರಶಂಸಿಸಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಟರಾದ ಡಾಲಿ ಧನಂಜಯ್, ನವೀನ್ ಶಂಕರ್, ಮತ್ತು ನವೀನ್ ಸಜ್ಜು ಕೂಡ ಈ ಚಿತ್ರಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ‘ಹೆಬ್ಬುಲಿ ಕಟ್’ ಚಿತ್ರವು ಜುಲೈ 4, 2025ರಂದು ಸಾರಾ ಫಿಲಂಸ್ ಮತ್ತು ಸತೀಶ್ ಪಿಕ್ಚರ್ ಹೌಸ್ ಬ್ಯಾನರ್ನಡಿ ರಾಜ್ಯಾದ್ಯಂತ ತೆರೆಕಾಣಲಿದೆ.ಕಿಚ್ಚ ಸುದೀಪ್ರ ಸ್ಟಾರ್ಡಮ್ನೊಂದಿಗೆ ಸ್ಥಳೀಯ ಕಥೆಯ ಸಾರವನ್ನು ಸಮರ್ಪಕವಾಗಿ ಬೆರೆಸಿರುವ ಈ ಚಿತ್ರ, ಅಭಿಮಾನಿಗಳಿಗೆ ವಿಶಿಷ್ಟ ಸಿನಿಮಾ ಅನುಭವವನ್ನು ಒದಗಿಸಲಿದೆ.