ಸಮಾಜದಲ್ಲಿ ಸಮಾನತೆ ಸಾಧಿಸಿದ್ದು ಡಿ.ದೇವರಾಜ ಅರಸರು : ಪ್ರೊ.ಸಕ್ಪಾಲ್ ಹೂವಣ್ಣ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : “ಊಳುವವನೇ ಭೂಮಿಯ ಒಡೆಯ ಎಂಬ ಕ್ರಾಂತಿಕಾರಿ ಕಾನೂನಿನ ಮೂಲಕ ಸಮಾಜದಲ್ಲಿ ಸಮಾನತೆಯನ್ನು ಸಾಧಿಸಿದ ಮಹಾನ್ ನಾಯಕ ದಿವಂಗತ ಡಿ.ದೇವರಾಜ ಅರಸರು,” ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಶಿಕ್ಷಣ ನಿಕಾಯದ ಡೀನ್ ಪ್ರೊ.ಸಕ್ಪಾಲ್ ಹೂವಣ್ಣ ಹೇಳಿದರು.
ವಿಶ್ವವಿದ್ಯಾಲಯದ ಸಮಾನ ಅವಕಾಶ ಘಟಕದ ವತಿಯಿಂದ ಬುಧವಾರ ಸಿಂಡಿಕೇಟ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ದಿವಂಗತ ಡಿ. ದೇವರಾಜ ಅರಸರ ೧೧೦ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಶಾಂತವೇರಿ ಗೋಪಾಲಗೌಡ, ರಾಜಕೀಯ ಧುರೀಣರಾಗಿದ್ದ ಎಂ.ಪಿ.ಪ್ರಕಾಶ, ಬಂಗಾರಪ್ಪ, ವೀರಪ್ಪ ಮೊಯಿಲಿ, ಆರ್.ಎಲ್.ಜಾಲಪ್ಪ, ಕೋಳೂರು ಮಲ್ಲಪ್ಪ, ಡಿ.ಕೆ.ನಾಯ್ಕರ್ ಮುಂತಾದ ನಾಯಕರು ದೇವರಾಜ ಅರಸರ ಮಾರ್ಗದರ್ಶನದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದರು. ಅರಸರು ಕೈಕೊಂಡ ಕ್ರಾಂತಿಕಾರಿ ಕ್ರಮಗಳಿಂದಾಗಿ ಜೀತಪದ್ದತಿ ನಿರ್ಮೂಲನೆ ಹಾಗೂ ಹಿಂದುಳಿದ ವರ್ಗಗಳಿಗೆ ಸಮಾಜದಲ್ಲಿ ಸಮಾನ ಬಾಳು, ಸಮಪಾಲು ಎಂಬ ತತ್ವವನ್ನು ಬೆಳೆಸಿತು,” ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ವಿಭಾಗದ ಪ್ರೊ.ನಾರಾಯಣ ಪವಾರ ಅವರು, “ಪ್ರಗತಿಪರ ಸಾಧನೆಗಳ ಸರದಾರ ಹಾಗೂ ಸಾಮಾಜಿಕ ಪರಿವರ್ತನೆಯ ಹರಿಕಾರ ದೇವರಾಜ ಅರಸರ ಕೊಡುಗೆಗಳು ಅಪಾರವಾಗಿವೆ. ೭೦ರ ದಶಕದಲ್ಲಿ ಅವರು ತಂದ ಬದಲಾವಣೆಗಳು ಕರ್ನಾಟಕದ ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿವೆ,” ಎಂದು ಹೇಳಿದರು.
ಪ್ರೊ.ಎಂ.ನಾಗರಾಜರು ಮಾತನಾಡಿ, “ಸಮಾಜವಾದದ ಬೆನ್ನೆಲುಬಾಗಿ, ಅದನ್ನು ಕರ್ನಾಟಕದಲ್ಲಿ ಬಿತ್ತಿ ಬೆಳೆಸಿದ ಮಹಾನ್ ನಾಯಕ ದೇವರಾಜ ಅರಸರು. ಅವರ ಮೌಲ್ಯಾಧಾರಿತ ರಾಜಕಾರಣ ರಾಜ್ಯದ ಅಭಿವೃದ್ಧಿಯ ಪಥದಲ್ಲಿ ಹೊಸ ದಿಕ್ಕು ತೋರಿಸಿತು,” ಎಂದು ಅಭಿಪ್ರಾಯಪಟ್ಟರು.
ಹಿರಿಯ ಪ್ರಾಧ್ಯಾಪಕ ಪ್ರೊ.ಪಿ.ಜಿ.ತಡಸದ ಅವರು, ದೇವರಾಜ ಅರಸರು ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯ ಎಂದು ಪುನರ್ ನಾಮಕರಣ ಮಾಡುವ ಮೂಲಕ ಕರ್ನಾಟಕದ ಏಕೀಕರಣಕ್ಕೆ ಹೊಸ ಬಾಷ್ಯ ಬರೆದರು ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ.ಓಂಕಾರ ಕಾಕಡೆ, ಮಾತನಾಡಿ ರಾಜ್ಯದ ರಾಜಕೀಯದಲ್ಲಿ ೭೦ರ ದಶಕದಲ್ಲಿ ತಳ ವರ್ಗದ ನಾಯಕತ್ವವನ್ನು ಬೆಳೆಸುವ ಮೂಲಕ ರಾಜ್ಯ ರಾಜಕಾರಣಕ್ಕೆ ಹೊಸ ದಿಕ್ಕನ್ನು ಕೊಟ್ಟವರು ಡಿ.ದೇವರಾಜ ಅರಸರು ಎಂದು ಬಣ್ಣಿಸಿದರು.“ಶ್ರೀಮತಿ ಇಂದಿರಾಗಾ0ಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಧೀಮಂತ ನಾಯಕ ದೇವರಾಜ ಅರಸರು. ಇಂದಿರಾಗಾAಧಿ ಜಾರಿಗೊಳಿಸಿದ್ದ ಗರೀಬಿ ಹಠಾವೋ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದರು ಎಂದು ಸ್ಮರಿಸಿಕೊಂಡರು.
ಹಿ0ದುಳಿದ ವರ್ಗಗಳ ಘಟಕದ ಸಂಯೋಜಕ ಪ್ರೊ. ಶ್ರೀನಿವಾಸ ಅವರು ಸ್ವಾಗತಿಸಿ, ಕಾರ್ಯಕಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ವಿದ್ಯಾರ್ಥಿನಿಯರು, ಹಾಗೂ ಭೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.