ಶಾಸಕ ಕೆ.ಗೋಪಾಲಯ್ಯ ಹಾಗೂ ಲಹರಿ ವೇಲುರಿಂದ ಅನಾವರಣವಾಯಿತು "ನಾಗವಲ್ಲಿ ಬಂಗಲೆ" ಚಿತ್ರದ ಟೀಸರ್ ಹಾಗೂ ಪೋಸ್ಟರ್

Jan 28, 2025 - 21:43
 0
ಶಾಸಕ ಕೆ.ಗೋಪಾಲಯ್ಯ ಹಾಗೂ ಲಹರಿ ವೇಲುರಿಂದ ಅನಾವರಣವಾಯಿತು "ನಾಗವಲ್ಲಿ ಬಂಗಲೆ" ಚಿತ್ರದ ಟೀಸರ್ ಹಾಗೂ ಪೋಸ್ಟರ್

ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಕಥಾಹಂದರ ಹೊಂದಿರುವ ಈ ಚಿತ್ರ ಫೆಬ್ರವರಿ 28 ರಂದು ತೆರೆಗೆ . 
 
ಕನ್ನಡದಲ್ಲಿ ಈಗ ಕಂಟೆಂಟ್ ಓರಿಯೆಂಟೆಡ್ ಚಿತ್ರಗಳದೇ ಕಾರುಬಾರು. ಅಂತಹ ವಿಭಿನ್ನ ಕಂಟೆಂಟ್ ಹೊಂದಿರುವ ಹಾರಾರ್ ಜಾನರ್ ಚಿತ್ರ "ನಾಗವಲ್ಲಿ ಬಂಗಲೆ". ಇತ್ತೀಚೆಗೆ ಈ ಚಿತ್ರದ ಟೀಸರ್ ಹಾಗೂ ಪೋಸ್ಟರ್ ಬಿಡುಗಡೆಯಾಯಿತು. ಶಾಸಕ ಕೆ.ಗೋಪಾಲಯ್ಯ ಹಾಗೂ ಲಹರಿ ವೇಲು ಟೀಸರ್ ಹಾಗೂ ಪೋಸ್ಟರ್ ಅನಾವರಣ ಮಾಡಿ ಚಿತ್ರಕ್ಕೆ ತಮ್ಮ ಪ್ರೋತ್ಸಾಹದ ನುಡಿಗಳ ಮೂಲಕ‌ ಶುಭ ಹಾರೈಸಿದರು. ಮಾಜಿ ಉಪ ಮಹಾಪೌರರಾದ ಪುಟ್ಟರಾಜು ಅವರು ಸಹ ಈ ಸಂದರ್ಭದಲ್ಲಿದ್ದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

 "ನಾಗವಲ್ಲಿ ಬಂಗಲೆ" ಚಿತ್ರದಲ್ಲಿ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಈ ಆರು ಗುಣಗಳನ್ನು ಪ್ರತಿನಿಧಿಸುವ ಆರು ಮುಖ್ಯಪಾತ್ರಗಳಿರುತ್ತದೆ. ಆರು ಜನ  ಹುಡುಗಿಯರು ಈ ಆರು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಆರು ಪಾತ್ರಗಳು "ನಾಗವಲ್ಲಿ ಬಂಗಲೆ" ಪ್ರವೇಶಿಸಿದಾಗ ಏನೆಲ್ಲಾ ಆಗುತ್ತದೆ ಎಂಬುದೆ ಚಿತ್ರದ ಕಥಾ ಹಂದರ ಎಂದು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಜೆ.ಎಂ.ಪ್ರಹ್ಲಾದ್ ತಿಳಿಸಿದರು.‌

ನಮ್ಮ ಆಫೀಸ್ ನಲ್ಲಿ ನಾನು ಹಾಗೂ ಜೆ.ಎಂ.ಪ್ರಹ್ಲಾದ್ ಅವರಿದ್ದಾಗ ಅಲ್ಲಿಗೆ ಆಗಮಿಸಿದ ನಿರ್ಮಾಪಕ ನೆ.ಲ ಮಹೇಶ್ ಅವರು, ಜೆ.ಎಂ.ಪ್ರಹ್ಲಾದ್ ಅವರು ಹೇಳಿದ ಕಥೆ ಕೇಳಿ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದರು. ನಿರ್ಮಾಪಕರು ಕಥೆ ಕೇಳಿದ ಕೇವಲ ಐದೇ ದಿನಗಳಲ್ಲಿ ಚಿತ್ರೀಕರಣ ಆರಂಭವಾಯಿತು. ಇದು ಹಾರಾರ್ ಚಿತ್ರವಾದರೂ, ಕೊನೆಯಲ್ಲಿ ದೆವ್ವ ಭೂತಗಳು ಇಲ್ಲ.‌ ಇದೆಲ್ಲಾ ನಮ್ಮ ಮನಸ್ಸಿನ ಭ್ರಮೆ ಎಂಬ ವಿಷಯವನ್ನು ಹೇಳಿದ್ದೇವೆ ಎಂದರು ನಿರ್ದೇಶಕ ಕವಿ ರಾಜೇಶ್.

ಹಂಸ ವಿಷನ್ಸ್ ಲಾಂಛನದಲ್ಲಿ ನಾನು ಹಾಗೂ ನೇವಿ ಮಂಜು ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ನೆ.ಲ.ನರೇಂದ್ರ ಬಾಬು‌, ನೇವಿ ಮಂಜು ಹಾಗೂ ಅನೇಕ ನೂತನ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಫೆಬ್ರವರಿ 28 ರಂದು ಚಿತ್ರವನ್ನು ತೆರೆಗೆ ತರುತ್ತೇವೆ ಎಂದು ನಿರ್ಮಾಪಕ ನೆ.ಲ.ಮಹೇಶ್ ಹೇಳಿದರು.

ನಾಗವಲ್ಲಿ ಪಾತ್ರಧಾರಿ ‌ತೇಜಸ್ವಿನಿ, ಚಿತ್ರದಲ್ಲಿ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಸಿಮ್ರಾನ್, ಮಾನಸ, ರೂಪಶ್ರೀ, ಸುಷ್ಮ, ರಂಜಿತ, ಶ್ವೇತ‌,‌ ನಾಯಕ ಯಶ್ ಹಾಗೂ ನೃತ್ಯ ನಿರ್ದೇಶಕ ತ್ರಿಭುವನ್ ಮುಂತಾದವರು ಚಿತ್ರದ ಕುರಿತು ಮಾಹಿತಿ ನೀಡಿದರು. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.