ಗಣೇಶೋತ್ಸವ ಹಾಗೂ ಈದ್ಮಿಲಾದ್ ಹಬ್ಬ : ಪೊಲೀಸ್ ಇಲಾಖೆಗೆ ಸಹಕರಿಸಿ : ಸಿಪಿಐ ಅವಜಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ದೇವರಹಿಪ್ಪರಗಿ : ಮುಂಬರುವ ಗಣೇಶೋತ್ಸವ ಹಾಗೂ ಈದ್ಮಿಲಾದ್ ಹಬ್ಬಗಳನ್ನು ಶಾಂತಿ ಯುತವಾಗಿ ಆಚರಿಸುವುದರ ಮೂಲಕ ಮಹಾ ಮಂಡಳಿ ಹಾಗೂ ಯುವಕ ಸಂಘಗಳು ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದು ವಿಜಯಪುರ ಗ್ರಾಮೀಣ ಸಿ.ಪಿ.ಐ ರಮೇಶ ಅವಜಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ನಿಮಿತ್ಯವಾಗಿ ಜರುಗಿದ ಶಾಂತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಟ್ಟಣ ಶಾಂತಿ, ಸೌಹಾರ್ದತೆಗೆ ಹೆಸರಾಗಿದೆ. ಇದನ್ನು ಮುಂದುವರೆಸಿ ಕೊಂಡುಹೋಗುವುದರ ಜೊತೆಗೆ ಎಲ್ಲರೂ ಸರ್ಕಾರದ ನಿಯಮಾವಳಿ ಪಾಲನೆ ಮಾಡಬೇಕು. ಯಾವುದೇ ಅನಗತ್ಯ ವಿಷಯಗಳತ್ತ ಗಮನ ನೀಡದೇ, ಶಿಸ್ತು, ಸಹನೆಯಿಂದ ಹಬ್ಬಗಳ ಆಚರಣೆಗೆ ಮುಂದಾಗಬೇಕು ಎಂದರು.
ಪಿಎಸ್ಐ ಸಚಿನ್ ಆಲಮೇಲಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪೊಲೀಸ್ ಇಲಾಖೆ ಜನ ಸ್ನೇಹಿ ಇಲಾಖೆಯಾಗಿ ಸಾರ್ವಜನಿಕರಿಗೆ ಸ್ಪಂದಿಸುತ್ತಿದೆ ಎಂದರು.
ಯಾವುದೇ ಕಾರಣಕ್ಕೂ ಸಮಾಜದ ಶಾಂತಿ ಕದಡುವ ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲ ಪಟ್ಟಣದ ಎಲ್ಲ ಗಣೇಶ ಮಹಾ ಮಂಡಳಿಗಳಿಗೆ ಹೆಸ್ಕಾಂ, ಪಟ್ಟಣ ಪಂಚಾಯಿತಿ ಸೇರಿದಂತೆ ಪೊಲೀಸ್ ಇಲಾಖೆಯ ಸಂಪೂರ್ಣ ಸಹಕಾರವಿದ್ದು, ಗಣೇಶ ಯುವಕ ಮಂಡಳಿಗಳು ಇಲಾಖೆಯ ನಿಯಮಾವಳಿಗಳನ್ನು ಪಾಲಿಸಬೇಕು ಎಂದರು.
ಮಹಾ ಮಂಡಳ ಹಾಗೂ ಸಾರ್ವಜನಿಕರ ಪರವಾಗಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಕುದರಿ, ಅಂಜುಮನ್ ಸಂಸ್ಥೆಯ ಅಧ್ಯಕ್ಷರಾದ ಮಹಿಬೂಬ್ ಹುಂಡೇಕಾರ, ಪ.ಪಂ ಉಪಾಧ್ಯಕ್ಷರಾದ ರಮೇಶ ಮಸಿಬಿನಾಳ ಮುಖಂಡರಾದ ಶಂಕರಗೌಡ ಪಾಟೀಲ, ಶ್ರೀಧರ ನಾಡಗೌಡ ಹಾಗೂ ಕಾಶಿನಾಥ ತಳಕೇರಿ ಮಾತನಾಡಿ ಶಾಂತಿಯುತವಾಗಿ ಹಬ್ಬಗಳನ್ನು ಆಚರಣೆ ಮಾಡುವ ಮೂಲಕ ಇಲಾಖೆಗೆ ಸಹಕಾರ ನೀಡುತ್ತೇವೆ ಎಂದರು.
ಸಭೆಯಲ್ಲಿ ಗಣ್ಯರಾದ ಸಯೀದ್ ರೂಗಿ, ರಾಜು ಮೆಟಗಾರ, ಸುನೀಲ್ ಕನಮಡಿ, ಹುಸೇನ್ ಗೌಂಡಿ ಸೇರಿದಂತೆ ಪಟ್ಟಣದ ಪ್ರಮುಖರು, ಗಣ್ಯರು, ವಿವಿಧ ಇಲಾಖೆಗಳ ಸಿಬ್ಬಂದಿ ವರ್ಗ, ಗಣೇಶ್ ಉತ್ಸವದ ಮಹಾಮಂಡಲದ ಹಾಗೂ ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.