ಜುಲೈ ೦೫ ರಿಂದ ಜುಲೈ ೧೧ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆ : ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ

ವಿಜಯಪುರ : ಎಸ್.ಎಸ್.ಎಲ್.ಸಿ ಪರೀಕ್ಷೆ-೩ರ ಪರೀಕ್ಷೆಗಳು ಜುಲೈ ೦೫ ರಿಂದ ಜುಲೈ ೧೧ರವರೆಗೆ ಜಿಲ್ಲೆಯ ಒಟ್ಟು ೪೧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಮುಂಜಾಗ್ರತೆಯಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-೨೦೨೩ರ ಕಲಂ ೧೬೩ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ಕಾರ್ಯದಲ್ಲಿ ತೊಡಗಿರುವ ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿಗಳು ಮತ್ತು ಇತರರು ಮೊಬೈಲ್ ತರುವುದನ್ನು ಹಾಗೂ ಬಳುಸುವುದನ್ನು ನಿಷೇಧಿಸಿದೆ. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಬೇಸಿಕ್ ಮೊಬೈಲ್ ಸೆಟ್ ಮಾತ್ರ ಬಳಸಬಹುದಾಗಿದೆ.
ಪರೀಕ್ಷಾ ಕೇಂದ್ರಗಳ ಸುತ್ತಲಿನ ೨೦೦ಮೀಟರ್ ಪ್ರದೇಶವನ್ನು ಪರೀಕ್ಷಾ ದಿನದಂದು ಬೆಳಿಗ್ಗೆ ೯ ರಿಂದ ಪರೀಕ್ಷೆ ಮುಕ್ತಾಯವಾಗುವವರೆಗೆ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ.
ಪರೀಕ್ಷಾ ಕೇಂದ್ರದ ಸಮೀಪದಲ್ಲಿರುವ ಝರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಸೆಂಟರಗಳು, ಇಂಟರನೆಟ್, ಸೈಬರ್ ಕೆಫೆಗಳು ಮತ್ತು ಕೋಚಿಂಗ್ ಕೇಂದ್ರಗಳು ಸದರಿ ಪರೀಕ್ಷಾ ಅವಧಿಯಲ್ಲಿ ತೆರೆಯದಂತೆ ಆದೇಶಿಸಲಾಗಿದೆ.