ಇಟ್ಟಿಗೆ ಭಟ್ಟಿ ಕಾರ್ಮಿಕರ ಮೇಲೆ ಹಲ್ಲೆ: ದಸಂಸ ಮುಖಂಡ ಶರಣು ಶಿಂದೆ ಖಂಡನೆ

ಸಿಂದಗಿ: ವಿಜಯಪುರದಲ್ಲಿ ಇತ್ತೀಚೆಗೆ ನಡೆದ ಇಟ್ಟಂಗಿ ಭಟ್ಟಿಯ ಕೂಲಿ ಕಾರ್ಮಿಕರ ಮೇಲೆ ಅಮಾನವೀಯವಾಗಿ ಹಿಂಸೆ ಮಾಡಿರುವ ಕೃತ್ಯ ಸಮಾಜ ವಿರೋಧಿಯಾಗಿದೆ. ಕೂಲಿ ಕಾರ್ಮಿಕರ ಮೇಲೆ ಹಿಂಸೆ ಮಾಡಿರುವ ದುರುಳರನ್ನು ಪೊಲೀಸ್ ಇಲಾಖೆ ಅತ್ಯಂತ ಕಠಿಣ ಶಿಕ್ಷೆ ಒಳಪಡಿಸಿ ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಡಿಎಸ್ಎಸ್ ಮುಖಂಡ ಶರಣು ಶಿಂಧೆ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆಯ ಮೂಲಕ ತಿಳಿಸಿದ ಅವರು ಸಮಾಜದಲ್ಲಿ ಗೂಂಡಾ ವರ್ತನೆ ತಾಂಡವಾಡುತ್ತಿದೆ. ಹೊಟ್ಟೆ ಪಾಡಿಗಾಗಿ ಅಲೆದಾಡುತ್ತಿರುವ ಕೂಲಿ ಕಾರ್ಮಿಕರ ಮೇಲೆ ಈ ರೀತಿ ದೌರ್ಜನ್ಯ ಮಾಡುತ್ತಿರುವುದು ಯಾವ ನ್ಯಾಯ. ಅವರು ತಪ್ಪು ಮಾಡಿದ್ದರೆ ಅದನ್ನ ತಿಳಿ ಹೇಳುವಲ್ಲಿ ಮುಂದಾಗಬೇಕೆ ಹೊರತು ಕೂಲಿ ಕಾರ್ಮಿಕರು ಎಂದು ಅವರ ಮೇಲೆ ಹೀನ ಕೃತ್ಯ ಮಾಡುವುದು ಸಮಾಜದ ವಿರೋಧಿ ಕಾರ್ಯ ಮತ್ತು ಇದು ದೊಡ್ಡ ಅಪರಾಧ. ಕಾರ್ಮಿಕರ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ ತಕ್ಷಣವೇ ವಿಜಯಪುರ ಗ್ರಾಮೀಣ ಪೊಲೀಸ್ ಅಧಿಕಾರಿಗಳು ಅಪರಾದಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನು ದಲಿತ ಸಂಘರ್ಷ ಸಮಿತಿ ಸ್ವಾಗತಿಸುತ್ತದೆ. ಆದರೆ ಆ ಕಿಡಿಗೇಡಿಗಳನ್ನು ಸುಮ್ಮನೆ ಬಿಡಬಾರದು. ಬೇರೆ ಬೇರೆ ಕಡೆ ಕೂಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಭಯದಿಂದ ಬದುಕುತ್ತಿದ್ದಾರೆ. ಅವರಿಗೆ ನೆಮ್ಮದಿಯ ಬದುಕು ಬೇಕಾಗಿದೆ. ಸಮಾಜದಲ್ಲಿ ನಿತ್ಯ ಕಾರ್ಮಿಕರ ಮೇಲೆ ಒಂದಿಲ್ಲೊಂದು ಹಲ್ಲೆಗಳು ನಿರಂತರವಾಗಿ ನಡೆಯುತ್ತಿವೆ. ಇದಕ್ಕೆ ಸಂಬಂಧಪಟ್ಟ ಕಾರ್ಮಿಕ ಇಲಾಖೆ ಜಾಣ ಕುರುಡರಂತೆ ವರ್ತಿಸುತ್ತಿದೆ. ಇದನ್ನು ಡಿಎಸ್ಎಸ್ ತೀವ್ರವಾಗಿ ಖಂಡಿಸುತ್ತದೆ. ಸರ್ಕಾರ ಮತ್ತು ಕಾರ್ಮಿಕ ಇಲಾಖೆ ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳಿಗೆ ಅತಿ ಕಠಿಣ ಕ್ರಮವನ್ನು ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.