"ನಮ್ಮ ಮರ, ನಮ್ಮ ಬೆಂಗಳೂರು" ಸಸಿ ನೆಡುವ ಅಭಿಯಾನಕ್ಕೆ ರಾಜ್ಯಪಾಲರಿಂದ ಚಾಲನೆ

ಬೆಂಗಳೂರು 29.01.2025: ಪೀಪಲ್ಸ್ ಪ್ಲಾನೆಟ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಬೆಂಗಳೂರಿನಾದ್ಯಂತ 10 ಲಕ್ಷ ಮರಗಳನ್ನು ನೆಡುವ 'ನಮ್ಮ ಮರ, ನಮ್ಮ ಬೆಂಗಳೂರು' ಅಭಿಯಾನಕ್ಕೆ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಭವನದ ಆವರಣದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ಪ್ರಸ್ತುತ ದೇಶ ಮತ್ತು ವಿಶ್ವದಲ್ಲಿ ಕೆಲವು ವರ್ಷಗಳಿಂದ ಪರಿಸರ ಅಸಮತೋಲನದ ಗಂಭೀರ ಸಮಸ್ಯೆ ಇದೆ. ಪರಿಸರವನ್ನು ರಕ್ಷಿಸುವ ಮತ್ತು ಸುಧಾರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಗಿಡ ನೆಟ್ಟು, ಅದನ್ನು ಪೋಷಿಸಿ ಪರಿಸರವನ್ನು ಸಂರಕ್ಷಿಸಬೇಕು. ಈ ಮೂಲಕ ಉತ್ತಮ ವಾತಾವರಣ ನಿರ್ಮಾಣ ಮಾಡಬಹುದಾಗಿದೆ. ಪೀಪಲ್ಸ್ ಪ್ಲಾನೆಟ್ ವತಿಯಿಂದ ಆಯೋಜಿಸಿರುವ ಈ ಅಭಿಯಾನ ಶ್ಲಾಘನೀಯ ಅವರಿಗೆ ಅಭಿನಂದಿಸುತ್ತೇನೆ ಎಂದ ಅವರು, ಪ್ರಕೃತಿಯನ್ನು ಪೋಷಿಸಿ, ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರು ಕೊಡುಗೆಯನ್ನು ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಉಪಸ್ಥಿತರಿದ್ದರು.