ಎಕ್ಸಲಂಟ್‌ ಕೋಚಿಂಗ್ ಕ್ಲಾಸ್ ಕಾರ್ಯ ನಿಜಕ್ಕೂ ಶ್ಲಾಘನೀಯ : ಕಲ್ಮೇಶ ಆಸಂಗಿ

Jan 31, 2025 - 13:05
 0
ಎಕ್ಸಲಂಟ್‌ ಕೋಚಿಂಗ್ ಕ್ಲಾಸ್ ಕಾರ್ಯ ನಿಜಕ್ಕೂ ಶ್ಲಾಘನೀಯ : ಕಲ್ಮೇಶ ಆಸಂಗಿ

ವಿಜಯಪುರ: ರಾಷ್ಟ್ರೀಯ ಮಿಲಟರಿ ಶಾಲೆಗೆ ಮಕ್ಕಳನ್ನು ತಯಾರು ಮಾಡಿ ಕಳಿಸುವುದೆಂದರೆ ದೇಶವನ್ನು ಕಾಯುವುದಕ್ಕೆ ಯೋಧನನ್ನು ಸಜ್ಜು ಮಾಡಿ ಕಳಿಸಿದಂತೆ. ಅದರಲ್ಲೂ ಮಕ್ಕಳಲ್ಲಿ ನೀನು ಹುಟ್ಟಿರುವುದೇ ಜನನಿ ಹಾಗೂ ಜನ್ಮ ಭೂಮಿಯ ಋಣ ತೀರಿಸುವುದಕ್ಕೆಂದು ಹೇಳಿ ದೇಶಭಕ್ತಿಯನ್ನು ತುಂಬಿ ಕಳುಹಿಸುವುದು ಈ ದೇಶಕ್ಕೆ ನಾವು ನೀಡುವ ದೊಡ್ಡ ಕೊಡಗೆಯಾಗುತ್ತದೆ. ಅಂಥ ಕೊಡುಗೆಯನ್ನು ನೀಡುತ್ತಿರುವ ಎಕ್ಸಲಂಟ್‌ನ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಭೂಸೇನೆಯ ನಿವೃತ್ತ ಹವಾಲ್ದಾರ ಮತ್ತು ದ್ರೋಣಾ ಅಕಾಡೆಮಿಯ ಮುಖ್ಯಸ್ಥ ಕಲ್ಮೇಶ ಆಸಂಗಿ ಹೇಳಿದರು.

ನಗರದ ಇಟ್ಟಂಗಿಹಾಳ ರಸ್ತೆಯಲ್ಲಿರುವ ಎಕ್ಸಲಂಟ್ ಕೋಚಿಂಗ್ ಕ್ಲಾಸಿಸ್ ವತಿಯಿಂದ ರಾಷ್ರ್ಟೀಯ ಮಿಲಿಟರಿ ಶಾಲೆಗೆ ಆಯ್ಕೆಯಾದ ಮಕ್ಕಳಿಗೆ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಅತ್ಯಂತ ಕಠಿಣ ಸ್ಫರ್ಧೆಯಿಂದ ಕೂಡಿರುವ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರಾಷ್ಟ್ರೀಯ ಮಿಲಿಟರಿ ಶಾಲೆಗೆ ಒಬ್ಬ ವಿದ್ಯಾರ್ಥಿಯನ್ನು ಕಳುಹಿಸುವುದೇ ಕಷ್ಟಕರವಾಗಿರುವ ಕಾಲಘಟ್ಟದಲ್ಲಿ ಐದೈದು ವಿದ್ಯಾರ್ಥಿಗಳನ್ನು ಆಯ್ಕೆಯಾಗುವಂತ ತರಬೇತಿ ನೀಡುವುದೆಂದರೆ ಅಸಾಮಾನ್ಯವೇ ಸರಿ. ಇದರ ಮಧ್ಯದಲ್ಲಿ ಅಸಾಧ್ಯವನ್ನು ಸಾಧ್ಯವಾಗಿಸುತ್ತ ಹೆಜ್ಜೆ ಹಾಕುತ್ತಿರುವ ಎಕ್ಸಲಂಟ್ ಸಂಸ್ಥೆಯ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಿಸಿದಂತಾಗಿದೆ ಎಂದರು.

ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆ ಎನ್ನುವುದು ಅಸಾಧ್ಯವಾದುದನ್ನು ಸಾಧ್ಯ ಮಾಡುವ ಶಿಕ್ಷಣ ಸಂಸ್ಥೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಪ್ರತಿ ವರ್ಷವೂ ನವೋದಯ, ಸೈನಿಕ ಹಾಗೂ ಕಿತ್ತೂರು ಸೇರಿದಂತೆ ಹಲವಾರು ಶಾಲೆಗಳಿಗೆ ನೂರಾರು ವಿದ್ಯಾರ್ಥಿಗಳನ್ನು ಕಳುಹಿಸುವ ಎಕ್ಸಲಂಟ್ ಸಂಸ್ಥೆ ಈ ಬಾರಿ ಐದು ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಮಿಲಿಟರಿ ಶಾಲೆಗೆ ಆಯ್ಕೆಯಾಗುವಂತೆ ಮಾಡಿದ್ದು ಎಕ್ಸಲಂಟ್‌ನ ಗುಣಮಟ್ಟದ ತರಬೇತಿಗೆ ಹಿಡಿದ ಕನ್ನಡಿಯಾಗಿದೆ. ಅದರಲ್ಲೂ ಸಾಮಾನ್ಯ ವರ್ಗದಲ್ಲಿ ಈ ವಿದ್ಯಾರ್ಥಿಗಳು ಆಯ್ಕೆಯಾಗುತ್ತಾರೆ ಎಂದರೆ ಅದು ನಿಜಕ್ಕೂ ಹೆಮ್ಮೆಯ ವಿಷಯವಾಗಿದ್ದು ಮುಂದಿನ ದಿನಗಳಲ್ಲಿ ನಮ್ಮ ದೇಶದ ರಕ್ಷಣೆಗಾಗಿ ವಿದ್ಯಾರ್ಥಿಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಳುಹಿಸುವಂತ ಕಾರ್ಯವಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಇಂದು ಐದು ಜನ ಮಕ್ಕಳು ರಾಷ್ಟ್ರೀಯ ಮಿಲಟರಿ ಶಾಲೆಗೆ ಆಯ್ಕೆಯಾಗಿದ್ದು ಈ ಸಾಧನೆಯ ಶ್ರೇಯ ಅವರಿಗೆ ತರಬೇತಿ ನೀಡಿದ ಶಿಕ್ಷಕರಿಗೆ ಸಲ್ಲುತ್ತದೆ. ಮಕ್ಕಳ ಜ್ಞಾನಕ್ಕನುಗುಣವಾಗಿ ಅವರಲ್ಲಿ ಪರಿವರ್ತನೆ ತಂದು ಅವರ ಬೆಳವಣಿಗೆ ಕಾರಣವಾಗುತ್ತಿರುವ ಶಿಕ್ಷಕರು ಈ ಬಾರಿ ಐದು ಜನರನ್ನು ಆಯ್ಕೆ ಮಾಡಿದರೆ ಮುಂದಿನ ದಿನಗಳಲ್ಲಿ ಐವತ್ತು ವಿದ್ಯಾರ್ಥಿಗಳು ಆಯ್ಕೆಯಾಗುವಂತೆ ಮಾಡುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರಲ್ಲು ಈ ಬಾರಿ ಕೆಲವೇ ಅಂಕಗಳ ಅಂತರದಲ್ಲಿ ಆಯ್ಕೆಯಿಂದ ವಂಚಿತರಾದ ವಿದ್ಯಾರ್ಥಿಗಳು ಬೇಸರ ಪಟ್ಟುಕೊಳ್ಳುವುದಕ್ಕಿಂತ ಮುಂಬರುವ ಸೈನಿಕ ಶಾಲೆ, ಕಿತ್ತೂರು ಪರೀಕ್ಷೆಗಳಲ್ಲಿ ಆಯ್ಕೆಯಾಗಿ ನಮ್ಮ ಸಾಮರ್ಥ್ಯವನ್ನು ತೋರಿಸುತ್ತೇವೆ ಎನ್ನುವ ಛಲ ಮೂಡಿಸಿಕೊಳ್ಳಬೇಕು ಎಂದು ಹೇಳುವ ಮೂಲಕ ಮಕ್ಕಳಿಗೆ ಸಾಧನೆಯ ಕಿಚ್ಚು ಹಚ್ಚಿದರು.

ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯ ಗೌರವ ಸದಸ್ಯ ರಾಜಶೇಖರ್ ಕೌಲಗಿ, ಎಕ್ಸಲಂಟ್ ಶಿಕ್ಷಣ ಸಂಸ್ಥೆಯ ಧಾರವಾಡ ವಿಭಾಗದ ಆಢಳಿತಾಧಿಕಾರಿ ಶಿವಾನಂದ ಬಿರಾದಾರ, ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಉಪ ಪ್ರಾಚಾರ್ಯ ಮಂಜುನಾಥ ಜುನಗೊಂಡ, ಎಕ್ಸಲಂಟ್ ಕೋಚಿಂಗ್ ಕ್ಲಾಸಿಸ್‌ನ ಶಿಕ್ಷಣ ಸಂಯೋಜಕರಾದ ವಿವೇಕಾನಂದ ಪೋದ್ದಾರ, ಮುರುಗೇಶ ಹದಗಪ್ಪನವರಮಠ ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಮಿಲಟರಿ ಶಾಲೆಗೆ ಆಯ್ಕೆಯಾದ ಸಾತ್ವಿಕ ಬಳಿಗಾರ, ವಿಹಾನಕುಮಾರ ಪೇಟಾ, ರಿಷಾನ್ ಬಗಲಿ, ಸಮರ್ಥ ದನ್ನೂರ, ಪ್ರಗತಿ ಚೌರಿಯವರನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ಛಾಯಪ್ಪ ನಿಂಬರಗಿ ಪ್ರಾರ್ಥಿಸಿದರು, ಹರೀಶ ಹದಗಪ್ಪನವರಮಠ ಸ್ವಾಗತಿಸಿ ನಿರೂಪಿಸಿದರು, ಸುಧಾರಾಣಿ ಪಾಟೀಲ್ ವಂದಿಸಿದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.