ಪಾರಂಪರಿಕ ಬದುಕಿನ ಅನಾವರಣವೇ ಏಕತಾರಿ : ಸುರೇಶ ಗಬ್ಬೂರ

ವಿಜಯಪುರ: ಗ್ರಾಮೀಣ ಬದುಕಿನ ಬವಣೆ, ಸಂತಸ-ದುಃಖ ಹೀಗೆ ಹಳ್ಳಿಗಾಡಿನ ಸೊಗಡನ್ನು ವಿವರಿಸುವ ಅಪ್ಪಟ್ಟ ಗ್ರಾಮೀಣ ಬದುಕನ್ನು ಸಹಜವಾಗಿಯೇ ವಿವರಿಸುತ್ತಾ ಭಿನ್ನ - ವಿಭಿನ್ನ ಆಯಾಮಗಳನ್ನು ನೀಡುತ್ತ, ಕೃತಿಯಲ್ಲಿನ ಬಹುತೇಕ ಕಥೆಗಳು ಅರಿವಿನ ಯಾತ್ರೆಗಳಾಗಿ, ಕುಸಿಯುತ್ತಿರುವ ವರ್ತಮಾನದ ವಿಚಾರಗಳ ಮಧ್ಯೆ ಗ್ರಾಮೀಣ ಜನತೆಯ ನಂಬಿಕೆಗಳು ಮತ್ತು ಗ್ರಾಮೀಣ ಭಾಷೆ, ಜನಪದರ ಬದುಕು, ಮಣ್ಣಿನ ಸೊಗಡಿನ ಉಪಮೆಗಳು ಓದುಗರಿಗೆ ಮುದ ನೀಡುತ್ತವೆ ಎಂದು ಬಸವನ ಬಾಗೇವಾಡಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಸುರೇಶ ಗಬ್ಬೂರ ಹೇಳಿದರು.
ಓದುಗರ ಚಾವಡಿ ಹಾಗೂ ರಾಜೇಂದ್ರ ಕುಮಾರ ಬಿರಾದರ ಸಾಂಸ್ಕೃತ ವೇದಿಕೆ ಶಿಕ್ಷಕ ಕಬುಲ್ ಕೋಕಟನೂರ ಅವರ ಮನೆಯಲ್ಲಿ ಹಮ್ಮಿಕೊಂಡ ಮಾಸಿಕ ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ಕತೆಗಾರ ಚನ್ನಪ್ಪ ಕಟ್ಟಿ ಅವರ ಏಕತಾರಿ ಪುಸ್ತಕ ಪರಿಚಯ ಮಾಡಿ ಮಾತನಾಡಿದರು.
ಚನ್ನಪ್ಪ ಕಟ್ಟಿ ಅವರು ಏಕತಾರಿ ಕಥಾ ಸಂಕಲನದಲ್ಲಿ ವೈಚಾರಿಕ ನಿಲುವಿಗೆ ಬದ್ಧವಾದ ಆಧುನಿಕ ವಿದ್ಯೆ, ಸಮುದಾಯದ ನಂಬಿಕೆ ಮತ್ತು ಶ್ರದ್ಧೆಗಳನ್ನು ಸಂದೇಹದಿಂದಲೇ ಚಿತ್ರಿಸುತ್ತಾರೆ. ಹಾಗೆಂದು ಅನುಮಾನಗಳನ್ನು ದೂರವಿರಿಸಿದರೆ ನಂಬಿಕೆಯ ಜೊತೆಯಲ್ಲಿಯೇ ಇರುವ ಮೂಢನಂಬಿಕೆಗಳನ್ನು ಮೆರೆಸಬೇಕಾಗುತ್ತದೆ. ಈ ತಾಕಲಾಟದಲ್ಲಿರುವ ಮನಸ್ಸು ಸಮುದಾಯವನ್ನು ಮುಕ್ತವಾಗಿ ನೋಡಲು ಸಾಧ್ಯವಾಗದೆ. ಪಾರಂಪರಿಕ ನಂಬಿಕೆಗಳಲ್ಲಿರುವ ಒಳ್ಳೆಯತನ, ಜೀವ-ಜೀವಗಳನ್ನು ಬೆಸೆಯಬಲ್ಲ ಹೃದಯವಂತಿಕೆಯನ್ನು ಗಮನಿಸದೆ ಹೋಗುವ ಅಪಾಯವೂ ಇರುತ್ತದೆ. ಇಂಥ ಅಪಾಯದಿಂದ ಪಾರಾಗಿರುವುದನ್ನು ‘ಏಕತಾರಿ’ಯಲ್ಲಿ ತುಂಬಾ ನಯವಾಗಿ ಹೆಣೆದಿದ್ದಾರೆ ಎಂದರು.
ಕಾರ್ಯಕ್ರಮವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ, ಆರೀಫಾ ಮಿರ್ಜಾ ಉದ್ಘಾಟಿಸಿ ಮಾತನಾಡಿ, ಮೊಬೈಲ್ ಸಂಸ್ಕೃತಿಯ ಇಂದಿನ ದಿನಮಾನದಲ್ಲಿ ಪುಸ್ತಕ ಪರಿಚಯ ಮಾಡುವ ಮೂಲಕ ಸಾಹಿತ್ತಿಕ ವಾತಾವರಣವನ್ನು ಹುಟ್ಟುಹಾಕುವ ಹಾಗೂ ಸಮಾಜವನ್ನು ಗೌರವದಿಂದ ಕಾಣುವ ಸಂಸ್ಕೃತಿ ಈ ಮುಖೇನ ಬೆಳೆಸುತ್ತಿರುವುದು ಸಂತಸದ ವಿಚಾರ ಎಂದರು.
ಚಾವಡಿ ಬಳಗದ ಅಧ್ಯಕ್ಷ ಶರಣು ಸಬರದ ಮಾತನಾಡಿ, ಮಾನವೀಯ ಮೌಲ್ಯಗಳು
ಕುಸಿಯುತಲ್ಲಿರುವ ಇಂದಿನ ದಿನಮಾನದಲ್ಲಿ ಪುಸ್ತಕಗಳನ್ನು ಓದುವ ಪರಂಪರೆ ಮತ್ತೆ ಮರುಕಳಿಸುತ್ತಿದೆ. ಉತ್ತಮ ಪುಸ್ತಕಗಳಿಗೆ ಉತ್ತಮ ಬೇಡಿಕೆಯಿದೆ ಆ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಕಾರ್ಯ ಪುಸ್ತಕಗಳಿಂದ ನಡೆಯುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಬಸವಭೂಷಣ ಪ್ರಶಸ್ತಿಗೆ ಭಾಜನರಾದ ಕಪನಿಂಬರಗಿ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಎನ್. ಎಂ. ಹರನಾಳ ಹಾಗೂ ಕರುನಾಡು ಕಿರೀಟ ಪ್ರಶಸ್ತಿಗೆ ಭಾಜನರಾದ ಪ್ರೊ.ಯು. ಎನ್. ಕುಂಟೋಜಿಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಳಗದ ಸದಸ್ಯರಾದ ಡಾ. ರಾಜಕುಮಾರ್ ಜೂಲ್ಲೆ, ಎ.ಎಂ. ಕುಮುಸಿಗಿ, ಬಸವರಾಜ ಕುಂಬಾರ, ರಾಜಶೇಖರ ಉಮರಾಣಿ, ಮೋಹನ ಕಟ್ಟಿಮನಿ, ಶ್ರೀ ರಾಮಣ್ಣ, ಶಶಿಧರ ಶಿರಹಟ್ಟಿ, ಶುಭಾಸ ಯಾದವಾಡ ಡಾ.ಗುರುಬಸಯ್ಯ ಹಿರೇಮಠ, ಡಾ.ಸುಭಾಷ್ಚಂದ್ರ ಕನ್ನೂರ, ಮಯೂರ ತಿಳಗೂಳಕರ, ರಾಘವೇಂದ್ರ ಗೋದಿ ಮುಂತಾದವರು ಉಪಸ್ಥಿತರಿದ್ದರು.