ಕಣ್ಮನ ಸೆಳೆಯುತ್ತಿದೆ "ರಾಜು ಜೇಮ್ಸ್ ಬಾಂಡ್" ಚಿತ್ರದ "ಕಣ್ಮಣಿ" ಹಾಡು

Jan 12, 2025 - 17:20
 0
ಕಣ್ಮನ ಸೆಳೆಯುತ್ತಿದೆ "ರಾಜು ಜೇಮ್ಸ್ ಬಾಂಡ್" ಚಿತ್ರದ "ಕಣ್ಮಣಿ" ಹಾಡು

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

 •ಗುರುನಂದನ್ ನಾಯಕರಾಗಿ ನಟನೆ 
•ಈ ಚಿತ್ರ ಫೆಬ್ರವರಿ 14 ರಂದು ತೆರೆಗೆ

ಕರ್ಮ ಬ್ರೋಸ್ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ, ದೀಪಕ್ ಮಧುವನಹಳ್ಳಿ ನಿರ್ದೇಶನದಲ್ಲಿ    
“ಫಸ್ಟ್ ರ‍್ಯಾಂಕ್ ರಾಜು” ಖ್ಯಾತಿಯ ಗುರುನಂದನ್ ನಾಯಕರಾಗಿ ನಟಿಸಿರುವ “ರಾಜು ಜೇಮ್ಸ್ ಬಾಂಡ್ " ಚಿತ್ರಕ್ಕಾಗಿ ಜ್ಯೋತಿ ವ್ಯಾಸರಾಜ್ ಬರೆದಿರುವ "ಕಣ್ಮಣಿ" ಎಂಬ ಹಾಡು ಇತ್ತೀಚಿಗೆ A2 ಮ್ಯೂಸಿಕ್ ಚಾನಲ್‌ ನಲ್ಲಿ ಬಿಡುಗಡೆಯಾಗಿದೆ. ಅನೂಪ್ ಸೀಳಿನ್ ಸಂಗೀತ ನೀಡಿರುವ ಈ ಹಾಡನ್ನು ಖ್ಯಾತ ಗಾಯಕ ಸಂಜಿತ್ ಹೆಗ್ಡೆ ಹಾಡಿದ್ದಾರೆ‌. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.   

 ಅಣ್ಣವ್ರು ಅಭಿನಯಿಸಿದ್ದ ಜೇಮ್ಸ್‌ ಬಾಂಡ್ ಚಿತ್ರದ ಕಥೆಯೇ ಬೇರೆ. "ರಾಜು ಜೇಮ್ಸ್ ಬಾಂಡ್" ಚಿತ್ರದ ಕಥೆಯೇ ಬೇರೆ ಎಂದು ಮಾತನಾಡಿದ ನಿರ್ದೇಶಕ ದೀಪಕ್ ಮಧುವನಹಳ್ಳಿ, ಇಂದು ನಮ್ಮ ಚಿತ್ರದಿಂದ "ಕಣ್ಮಣಿ" ಎಂಬ ರೊಮ್ಯಾಂಟಿಕ್ ಸಾಂಗ್ ಬಿಡುಗಡೆಯಾಗಿದೆ. ಜ್ಯೋತಿ ವ್ಯಾಸರಾಜ್ ಅವರು ಬರೆದಿರುವ ಹಾಡನ್ನು ಸಂಜಿತ್ ಹೆಗ್ಡೆ ಅವರ ಧ್ವನಿಯಲ್ಲಿ ಕೇಳುವುದೆ ಚೆಂದ. ಅನೂಪ್ ಸೀಳಿನ್ ಅವರ ಸಂಗೀತ ಹಾಡಿನ ಶ್ರೀಮಂತಿಕೆಯನ್ನು‌ ಮತ್ತಷ್ಟು ಹೆಚ್ಚಿಸಿದೆ. ಮುರಳಿ ಮಾಸ್ಟರ್ ಈ ಮನಮೋಹಕ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಗುರುನಂದನ್ ಹಾಗೂ ಮೃದುಲ ಲಂಡನ್‌ ಸುತ್ತಮುತ್ತಲಿನ ಸುಂದರ ಪರಿಸರದಲ್ಲಿ ಚಿತ್ರೀಕರಣವಾಗಿರುವ ಈ ಗೀತೆಯಲ್ಲಿ ಅಭಿನಯಿಸಿದ್ದಾರೆ ಎಂದರು.

ಇಂದು ನಮ್ಮ ಚಿತ್ರದ "ಕಣ್ಮಣಿ" ಹಾಡು ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ನಾನು ಚೆನ್ನಾಗಿ ನೃತ್ಯ ಮಾಡಿದ್ದೀನಿ ಅಂದರೆ ಅದಕ್ಕೆ ಮುರಳಿ ಮಾಸ್ಟರ್ ಕಾರಣ. ಅವರಿಗೆ ನನ್ನ ಕಡೆಯಿಂದ ಧನ್ಯವಾದ. ನಮ್ಮ ಚಿತ್ರ ಡಿಸೆಂಬರ್ ಕೊನೆಯಲ್ಲೇ ಬಿಡುಗಡೆಯಾಗಬೇಕಿತ್ತು.‌ ಆದರೆ ಎರಡು ದೊಡ್ಡ ಚಿತ್ರಗಳು ಅದೇ ಸಮಯಕ್ಕೆ ಬಿಡುಗಡೆಯಾದ್ದುದ್ದರಿಂದ ನಮ್ಮ ಚಿತ್ರದ ಬಿಡುಗಡೆ ಸ್ವಲ್ಪ ಮುಂದೆ ಹೋಯಿತು. ಫೆಬ್ರವರಿ 14 ನಮ್ಮ ಚಿತ್ರ ಬಿಡುಗಡೆಯಾಗಲಿದೆ ನೋಡಿ ಹಾರೈಸಿ ಎಂದರು ನಾಯಕ‌ ಗುರುನಂದನ್.

ನಮ್ಮ ಚಿತ್ರ ಫೆಬ್ರವರಿ 14 ರಂದು ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ನೇಪಾಳಿ ಭಾಷೆಗೂ ನಮ್ಮ ಚಿತ್ರದ ರೈಟ್ಸ್ ಮಾರಾಟವಾಗಿದೆ. ಇಂದು ಬಿಡುಗಡೆಯಾಗಿರುವ ಹಾಡು ಲಂಡನ್ ನ ಸುಂದರ ಪರಿಸರದಲ್ಲಿ ಚಿತ್ರೀಕರಣವಾಗಿದೆ. ಫೆಬ್ರವರಿ 14ರಂದು ನಮ್ಮ ಚಿತ್ರ ಕರ್ನಾಟಕದಲ್ಲಿ ಸತ್ಯ ಪಿಕ್ಚರ್ಸ್‌ ಮೂಲಕ ಬಿಡುಗಡೆಯಾಗುತ್ತಿದೆ ಎಂದರು ನಿರ್ಮಾಪಕರಾದ ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರು.

ನಾಯಕಿ ಮೃದುಲ,‌ ನೃತ್ಯ ನಿರ್ದೇಶಕ ಮುರಳಿ ಹಾಗೂ ವಿತರಕ ಸತ್ಯಪ್ರಕಾಶ್ "ಕಣ್ಮಣಿ" ಹಾಡು ಹಾಗೂ ಚಿತ್ರದ ಬಗ್ಗೆ ಮಾತನಾಡಿದರು.

ಗುರುನಂದನ್ ಈ ಚಿತ್ರದ ನಾಯಕರಾಗಿ ನಟಿಸಿದ್ದಾರೆ. ಮೃದುಲಾ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.